ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಾವಳಿಗಳ ಪ್ರಕಾರ ಬ್ಯಾಂಕ್ ಸಿಬ್ಬಂದಿ ಪ್ರಾದೇಶಿಕ ಭಾಷೆಯಲ್ಲೇ ಗ್ರಾಹಕರಿಗೆ ಅನುಕೂಲವಾಗುವಂತೆ ಮಾತನಾಡಿ ವ್ಯವಹಾರ ಮಾಡಬೇಕು ಎಂದು ನಿಯಮವಿದೆ. ಈ ನಿಯಮವನ್ನು ಅರ್ಥಮಾಡಿಕೊಳ್ಳದೆ ಬ್ಯಾಂಕ್ ಮ್ಯಾನೇಜರ್ ಒಬ್ಬರು "ಕನ್ನಡ ಮಾತನಾಡಲ್ಲ. ಹೋಗಿ ಬ್ಯಾಂಕ್ ಛೇರ್ಮನ್ ಗೆ ಕಂಪ್ಲೇಂಟ್ ಮಾಡಿಕೊಳ್ಳಿ" ಎಂದು ಗ್ರಾಹಕರ ಬಳಿ ದುರಹಂಕಾರದ ಮಾತುಗಳನ್ನು ಆಡಿ ಉದ್ಧಟತನ ಮೆರೆದ ಪ್ರಕರಣದ ಬಗ್ಗೆ ವರದಿಯಾಗಿದೆ. ಈ ಬ್ಯಾಂಕ್ ಮ್ಯಾನೇಜರ್ ಗ್ರಾಹಕರಿಂದಲೇ ಬ್ಯಾಂಕ್ ನಡೆಯುವುದು, ಬ್ಯಾಂಕಿನ ವ್ಯವಹಾರ ಮತ್ತು ಬೆಳವಣಿಗೆಗೆ ಮೂಲ ಕಾರಣ ಅದರ ಗ್ರಾಹಕ ಸಮೂಹ ಎನ್ನುವ ಕನಿಷ್ಠ ಪರಿಜ್ಞಾನವನ್ನೂ ಸಹ ಮರೆತಿರುವುದು ಅತ್ಯಂತ ವಿಷಾದನೀಯ ಸಂಗತಿ ಎಂದೇ ಹೇಳಬಹುದು.
ಕರ್ನಾಟಕದಲ್ಲಿ ಇದ್ದುಕೊಂಡು, ಇಲ್ಲಿನ ಅನ್ನ ತಿಂದು, ಇಲ್ಲಿನ ಮಣ್ಣಿನ ನೀರು ಕುಡಿದು, ಎಲ್ಲ ರೀತಿಯ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾ ಕನ್ನಡ ನೆಲ-ಭಾಷೆಯ ಬಗ್ಗೆ ಕೀಳಾಗಿ ನೋಡುವ ಕೆಟ್ಟ ಮನಸ್ಸಿನ ಮಂದಿ ನಮ್ಮ ನಡುವೆಯೇ ಇದ್ದಾರೆ ಎನ್ನುವ ವಿಚಾರ ನಿಜಕ್ಕೂ ಅತ್ಯಂತ ವಿಷಾದನೀಯ ಸಂಗತಿಯಾಗಿದೆ. ಈ ಹಿಂದೆ ಸಹ "ಕನ್ನಡ ಮಾತನಾಡಲ್ಲ. ಏನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ" ಎಂದು ದರ್ಪದಿಂದ ವರ್ತಿಸಿರುವ ಅನೇಕ ಪ್ರಕರಣಗಳನ್ನು ನಾವು ಗಮನಿಸಿದ್ದೇವೆ.
ಈಗ ಅಂತಹ ಪ್ರಕರಣಗಳ ಪಟ್ಟಿಗೆ ಹೊಸದೊಂದು ಪ್ರಕರಣ ಸೇರ್ಪಡೆಯಾಗಿದೆ. ಕರ್ನಾಟಕದಲ್ಲಿ ನಾನು ಯಾವತ್ತಿಗೂ ಕನ್ನಡದಲ್ಲಿ ಮಾತನಾಡುವುದಿಲ್ಲ ಎಂದು ಬೆಂಗಳೂರಿನ ಚಂದಾಪುರದ ಎಸ್ಬಿಐ ಬ್ಯಾಂಕ್ ಲೇಡಿ ಮ್ಯಾನೇಜರ್ ದರ್ಪ ಮತ್ತು ದುರಹಂಕಾರದ ವರ್ತನೆಯನ್ನು ತೋರಿಸಿದ್ದಾರೆ. ಈಕೆಯ ನಡೆಯನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ತೀರ್ವವಾಗಿ ಖಂಡಿಸಿದ್ದಾರೆ.
ಆನೇಕಲ್ ತಾಲೂಕಿನ ಸೂರ್ಯನಗರದಲ್ಲಿರುವ ಎಸ್ಬಿಐ ಶಾಖಾ ವ್ಯವಸ್ಥಾಪಕರು (ಮ್ಯಾನೇಜರ್) ಕನ್ನಡದಲ್ಲಿ ಮಾತನಾಡಲು ನಿರಾಕರಿಸಿದ್ದಲ್ಲದೇ, "ಕನ್ನಡ ಮಾತನಾಡುವುದಿಲ್ಲ. ಛೇರ್ಮನ್ ಗೆ ಬೇಕಾದರೂ ಕಂಪ್ಲೇಂಟ್ ಮಾಡಿಕೊಳ್ಳಿ" ಎಂದು ದುರಹಂಕಾರದ ಪರಮಾಧಿಯನ್ನು ಮೀರಿಸುವ ದರ್ಪದ ಮಾತುಗಳನ್ನು ಆಡಿದ್ದಾರೆ. ಈ ಅಧಿಕಾರಿಯ ಹದ್ದು ಮೀರಿದ ವರ್ತನೆಗೆ ಕನ್ನಡಿಗರು ಸಿಟ್ಟಿಗೆದ್ದಿರುವುದನ್ನು ಗಮನಿಸಿದ ಎಸ್ಬಿಐನ ಆಡಳಿತ ಮಂಡಳಿ ಅಧಿಕಾರಿಯನ್ನು ತಕ್ಷಣ ರಾತ್ರೋ ರಾತ್ರಿ ಬೇರೆ ಕಡೆಗೆ ವರ್ಗಾವಣೆ ಮಾಡಿದೆ. ಎಸ್ಬಿಐನ ಈ ತ್ವರಿತ ಕ್ರಮವನ್ನು ನಾವು ಶ್ಲಾಘಿಸಲೇಬೇಕು. ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಬ್ಯಾಂಕಿನ ಆಡಳಿತ ಕಾಳಜಿ ವಹಿಸಬೇಕು ಎಂದು ಕನ್ನಡಿಗರ ಆಗ್ರಹವಾಗಿದೆ.
ಎಲ್ಲಾ ಬ್ಯಾಂಕ್ ಉದ್ಯೋಗಿಗಳು ಪ್ರಾದೇಶಿಕ ಭಾಷೆಯಲ್ಲೇ ಆದಷ್ಟು ಮಾತನಾಡಲು ಪ್ರಯತ್ನಿಸಿ ಗ್ರಾಹಕರನ್ನು ಘನತೆಯಿಂದ ನಡೆಸಿಕೊಳ್ಳಬೇಕು ಮತ್ತು ಸ್ಥಳೀಯ ಭಾಷೆಯಲ್ಲಿ ಮಾತನಾಡಲು ತಮ್ಮ ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. ಆ ಲೇಡಿ ಬ್ಯಾಂಕ್ ಮ್ಯಾನೇಜರ್ ತಮಗೆ ಕನ್ನಡ ಭಾಷೆ ಬರುವುದಿಲ್ಲ. ಕಲಿತು ಮಾತನಾಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದರೂ ಸಾಕಾಗುತ್ತಿತ್ತು. ಆದರೆ ಕನ್ನಡ ಮಾತೇ ಆಡುವುದಿಲ್ಲ. ಏನು ಬೇಕಿದ್ದರೂ ಮಾಡಿಕೊಳ್ಳಿ ಎಂದು ದರ್ಪ ತೋರಿದರೆ ಏನರ್ಥ? ಸ್ವಲ್ಪವಾದರೂ ಪ್ರಜ್ಞೆ, ಮಾತನಾಡುವ ಜ್ಞಾನವಾದರೂ ಇದ್ದಿದ್ದರೆ ಯಾರಾದರೂ ಈ ರೀತಿಯಾಗಿ ಗ್ರಾಹಕರನ್ನು ಕೀಳಾಗಿ ನಡೆಸಿಕೊಳ್ಳುತ್ತಾರೆಯೇ?
ಭಾರತ ದೇಶಾದ್ಯಂತ ಎಲ್ಲಾ ಬ್ಯಾಂಕ್ ಸಿಬ್ಬಂದಿಗಳಿಗೆ ಸಾಂಸ್ಕೃತಿಕ ಹಾಗೂ ಭಾಷಾ ಸಂವೇದನಾ ತರಬೇತಿಯನ್ನು ಕಡ್ಡಾಯಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯ ಮತ್ತು ಹಣಕಾಸು ಸೇವೆಗಳ ಇಲಾಖೆಯನ್ನು ಆಗ್ರಹಿಸಿದ್ದಾರೆ ಎಂದು ವರದಿಯಾಗಿದೆ. ಸ್ಥಳೀಯ ಭಾಷೆಯನ್ನು ಗೌರವಿಸುವುದು ಎಂದರೆ ಸ್ಥಳೀಯ ಜನರಿಗೆ ಗೌರವ ನೀಡಿದಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆ
ಬೆಂಗಳೂರು ನಗರದ ಚಂದಾಪುರದಲ್ಲಿರುವ ಎಸ್ಬಿಐ ಬ್ಯಾಂಕಿನ ಮಹಿಳಾ ಮ್ಯಾನೇಜರ್ ಒಬ್ಬರು ಕನ್ನಡದ ಬಗ್ಗೆ ಅಸಡ್ಡೆಯುಳ್ಳ ಕೀಳು ಮಾತುಗಳನ್ನು ಆಡಿದ್ದರು. ಬ್ಯಾಂಕ್ಗೆ ಹೋಗಿದ್ದ ಕನ್ನಡಿಗರು ತಮಗೆ ಬೇರೆ ಭಾಷೆ ಬರುವುದಿಲ್ಲ. ಅದಕ್ಕಾಗಿ ಕನ್ನಡದಲ್ಲಿ ಸೇವೆ ಕೊಡಿ ಎಂದು ಕೇಳಿದ್ದಕ್ಕೆ, ಕನ್ನಡ ಮಾತನಾಡಲು ಸಾಧ್ಯವೇ ಇಲ್ಲ ಎಂದು ಉದ್ಧಟತನದಿಂದ ವರ್ತಿಸಿದ್ದರು. ಇದು ಕರ್ನಾಟಕ ಎಂದು ಗ್ರಾಹಕರು ಹೇಳಿದ್ದಕ್ಕೆ ಕರ್ನಾಟಕ ಆದರೆ ನನಗೇನು? ಇದು ಇಂಡಿಯಾ, ಹಾಗಾಗಿ ನಾನು ಹಿಂದಿಯಲ್ಲೇ ಮಾತನಾಡುತ್ತೇನೆ. ಕನ್ನಡ ಮಾತನಾಡುವುದಿಲ್ಲ. ನೀವು ಏನು ಬೇಕಾದರೂ ಮಾಡಿಕೊಳ್ಳಿ. ನಾನು ಮಾತ್ರ ಎಂದಿಗೂ ಕನ್ನಡದಲ್ಲಿ ಮಾತನಾಡುವುದಿಲ್ಲ ಎಂದು ಜೋರು ಧ್ವನಿಯಲ್ಲಿ ಅಹಂಕಾರದಿಂದ ಸವಾಲು ಹಾಕಿದ್ದರು. ಇದನ್ನು ವಿಡಿಯೋ ಮಾಡಿಕೊಂಡಿದ್ದ ಕನ್ನಡಿಗ ಪ್ರಾದೇಶಿಕ ಗ್ರಾಹಕರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹರಿಬಿಟ್ಟಿದ್ದರು. ವಿಡಿಯೋ ವೈರಲ್ ಆದ ಕೂಡಲೇ ರಾಜ್ಯದಾದ್ಯಂತ ಲೇಡಿ ಬ್ಯಾಂಕ್ ಮ್ಯಾನೇಜರ್ ದುರ್ವರ್ತನೆಗೆ ತೀವ್ರವಾದ ಆಕ್ರೋಶ ವ್ಯಕ್ತವಾಗಿತ್ತು. ರಾಜ್ಯಾದ್ಯಂತ ಜನರು ಮ್ಯಾನೇಜರ್ ವರ್ತನೆಯನ್ನು ಖಂಡಿಸಿದ್ದರು.
ನಾಮಕಾವಸ್ಥೆಗೆ ಕಾಟಾಚಾರದ ಕ್ಷಮೆ ಕೇಳಿದ ಲೇಡಿ ಮ್ಯಾನೇಜರ್
ಯಾವಾಗ ತಾವು ಕನ್ನಡ ಮಾತನಾಡುವುದಿಲ್ಲ ಎಂದು ಹೇಳಿದ ವಿಡಿಯೋ ವೈರಲ್ ಆಗಿ ರಾಜ್ಯಾದ್ಯಂತ ಜನರ ಆಕ್ರೋಶದ ಕಟ್ಟೆ ಒಡೆದು ಜನ ಸಿಟ್ಟಿಗೇಳಲು ಆರಂಭವಾಯಿತೋ, ಬೆದರಿದ ಬ್ಯಾಂಕ್ ಮ್ಯಾನೇಜರ್ ಕಾಟಾಚಾರಕ್ಕೆ ಎನ್ನುವಂತೆ ಕ್ಷಮೆಯಾಚನೆ ಮಾಡಿದ್ದರು. ಕ್ಷಮೆಯಾಚನೆ ಮಾಡುವ ಸಂದರ್ಭದಲ್ಲೂ ಸಹ ಶಿಸ್ತಿನಿಂದ ವರ್ತಿಸದೇ, ಅಪಹಾಸ್ಯ ಮಾಡುವ ನಗುವಿನ ಮುಖದಿಂದ ಕ್ಷಮೆಯಾಚನೆ ಮಾಡಿದ್ದರು. ಅವರ ಮುಖದಲ್ಲಿ ತಾವು ಮಾಡಿದ ಕೆಲಸಕ್ಕೆ ಸ್ವಲ್ಪವೂ ಪಶ್ಚಾತ್ತಾಪ ಎನ್ನುವುದು ಕಾಣಿಸುತ್ತಿರಲಿಲ್ಲ. ಯಾರಾದರೂ ಕ್ಷಮೆ ಕೇಳುವ ಸಂದರ್ಭದಲ್ಲಿ ನಗುವುದನ್ನು ನೀವು ಯಾವತ್ತಾದರೂ ಕಂಡಿದ್ದೀರಾ? ಇದೆಂತಹ ರೀತಿಯ ಕ್ಷಮೆಯಾಚನೆ? ಅವರಿಗೆ ಕ್ಷಮೆ ಕೇಳುವ ಹಿಂದಿನ ಅರ್ಥವಾದರೂ ಗೊತ್ತೇ? ಇಂತಹ ವ್ಯಕ್ತಿಯನ್ನು ಅದ್ಯಾವ ಆಧಾರದಲ್ಲಿ ಬ್ಯಾಂಕಿನ ಮ್ಯಾನೇಜರ್ ಕೆಲಸಕ್ಕೆ ನೇಮಿಸಿದ್ದಾರೆ ಎನ್ನುವುದೇ ಆಶ್ಚರ್ಯದ ವಿಷಯ.
ಈ ರೀತಿಯ ಕ್ಷಮೆ ಕೇಳುವುದು ಬೇಕಾಗಿಲ್ಲ. ಆಕೆ ಮಾಡಿದ ಕೆಲಸಕ್ಕೆ ಆಕೆಯ ವಿರುದ್ಧ ಕಠಿಣವಾದ ಕ್ರಮವನ್ನು ಜರುಗಿಸಲೇಬೇಕು ಎಂದು ಎಸ್ಬಿಐ ಆಡಳಿತ ಮಂಡಳಿ ಬಳಿ ಕನ್ನಡಿಗರು ಒತ್ತಾಯ ಮಾಡಲು ಪ್ರಾರಂಭಿಸಿದರು. ಈ ಪ್ರಕರಣದ ಗಂಭೀರತೆಯನ್ನು ಅರಿತ ಎಸ್ಬಿಐ ತಕ್ಷಣ ಲೇಡಿ ಮ್ಯಾನೇಜರ್ ಅನ್ನು ವರ್ಗಾವಣೆ ಮಾಡುವ ಗಟ್ಟಿಯಾದ ನಿರ್ಧಾರವನ್ನು ತೆಗೆದುಕೊಂಡು, ಮ್ಯಾನೇಜರ್ ದುರ್ವರ್ತನೆಯಿಂದ ಬ್ಯಾಂಕಿನ ಘನತೆಯ ಮೇಲೆ ಆದಂತಹ ದುಷ್ಪರಿಣಾಮಗಳಿಂದ ಮತ್ತು ಮುಖಭಂಗದಿಂದ ಪಾರಾಗಲು ಪ್ರಯತ್ನಿಸಿತು.