ಇಸ್ರೇಲ್-ಇರಾನ್ ನಡುವಿನ ಯುದ್ಧ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ಇರಾನ್ ರಾಜಧಾನಿಯಾದ ಟೆಹರಾನ್ ಅನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ಮಾಡಿದೆ. ಈ ದಾಳಿಯಲ್ಲಿ 200 ಕ್ಕೂ ಅಧಿಕ ಅಮಾಯಕ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇದಕ್ಕೆ ಉತ್ತರವಾಗಿ ಇರಾನ್ ಕೂಡ ಇಸ್ರೇಲ್ ಮೇಲೆ ಕ್ಷಿಪಣಿಗಳ ಮೂಲಕ ದಾಳಿ ನಡೆಸಿದೆ. ಇಸ್ರೇಲ್ ರಾಜಧಾನಿ ಟೆಲ್ ಅವಿವ್ ಸೇರಿದಂತೆ ಇಸ್ರೇಲ್ ನ ಪ್ರಮುಖ ನಗರಗಳ ಮೇಲೆ ಇರಾನ್ ಕ್ಷಿಪಣಿಗಳ ದಾಳಿ ನಡೆಸುತ್ತಿದೆ. ಈ ಪ್ರತಿದಾಳಿಯಲ್ಲಿ ಇಸ್ರೇಲಿನ 30 ಕ್ಕೂ ಹೆಚ್ಚು ಯಹೂದಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಇದರ ಜೊತೆಗೆ ಇರಾನ್ ಉಡಾಯಿಸಿದ ಕ್ಷಿಪಣಿಗಳು ಇಸ್ರೇಲ್ನ ಗುಪ್ತಚರ ಸಂಸ್ಥೆಯಾದ ಮೊಸಾದ್ ನ ಮುಖ್ಯ ಕಾರ್ಯ ಕಚೇರಿಯನ್ನು ನಾಶ ಪಡಿಸಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಇದರ ಬಗ್ಗೆ ಇಸ್ರೇಲ್ ಇನ್ನೂ ಕೂಡ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ ಎಂದು ವರದಿಯಾಗಿದೆ. ಈ ಬೆಳವಣಿಗೆ ಇಸ್ರೇಲ್ ದೇಶಕ್ಕೆ ಬಹುದೊಡ್ಡ ಆಘಾತವುಂಟುಮಾಡಿದೆ ಎಂದು ಹೇಳಲಾಗಿದೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಲವಾರು ಜನ ಇದಕ್ಕೆ ಸಂಬಂಧಿಸಿದಂತಹ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗಳಲ್ಲಿ ಮೊಸಾದ್ ಮುಖ್ಯ ಕಚೇರಿ ಕ್ಷಿಪಣಿಗಳು ಮತ್ತು ಬಾಂಬ್ ದಾಳಿಯಿಂದ ಹೊತ್ತಿ ಉರಿಯುತ್ತಾ ಇರುವುದನ್ನು ನೋಡಬಹುದಾಗಿದೆ. ಇಸ್ರೇಲಿನ ಗುಪ್ತಚರ ಸಂಸ್ಥೆಯಾದ ಮೊಸಾದ್ ಇಸ್ರೇಲಿಗರ ಹೆಮ್ಮೆಯ ಸಂಸ್ಥೆ. ಇದರ ಮುಖ್ಯ ಕಚೇರಿಯ ಮೇಲೆ ಇರಾನ್ ದಾಳಿ ಮಾಡಿದ್ದು ದೃಢ ಪಟ್ಟರೆ, ಇದರಿಂದ ಯಹೂದಿಗಳ ಸಿಟ್ಟು ಮತ್ತಷ್ಟು ಹೆಚ್ಚಾಗಲಿದೆ.
ಜೂನ್ 13ರಂದು ಮುಂಜಾನೆ ಇಸ್ರೇಲ್ ಇರಾನ್ ಮೇಲೆ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ಇರಾನ್ನ ಸೇನಾ ಮುಖ್ಯಸ್ಥರಾದ ಮೊಹಮ್ಮದ್ ಬಾಗೇರಿ, ಐಆರ್ಜಿಸಿ ಮುಖ್ಯಸ್ಥ ಹುಸೇನ್ ಸಲಾಮಿ ಸೇರಿದಂತೆ ಹಲವು ಹಿರಿಯ ಸೇನಾಧಿಕಾರಿಗಳು ಮತ್ತು ಒಂಬತ್ತು ಪರಮಾಣು ವಿಜ್ಞಾನಿಗಳು ಮೃತಪಟ್ಟಿದ್ದರು.
ಇದರ ಬೆನ್ನಲ್ಲೇ ಇಸ್ರೇಲಿನ ಮೊಸಾದ್ ಕಚೇರಿಯ ಮೇಲೆ ಇರಾನ್ ನಡೆಸಿದ ದಾಳಿಯಿಂದ ಆಕ್ರೋಶಗೊಂಡ ಯಹೂದಿಗಳು ಇರಾನ್ ವಿರುದ್ಧ ಪರಮಾಣು ಅಸ್ತ್ರ ಬಳಕೆ ಮಾಡುವಂತಹ ಅಪಾಯಕಾರಿ ಸನ್ನಿವೇಶ ಸೃಷ್ಟಿಯಾದರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಹೇಳಲಾಗಿದೆ.
ಇಸ್ರೇಲ್ನ ದಾಳಿಗೆ ಪ್ರತಿದಾಳಿಯಾಗಿ ಇರಾನ್ 150ಕ್ಕೂ ಹೆಚ್ಚು ಬಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಭಾರೀ ಪ್ರಮಾಣದಲ್ಲಿ 100ಕ್ಕೂ ಅಧಿಕ ಡ್ರೋನ್ಗಳ ಮೂಲಕ ಟೆಲ್ ಅವಿವ್ ಸೇರಿದಂತೆ ಇತರ ಪ್ರಮುಖ ನಗರಗಳ ಮೇಲೆ ಆಕ್ರಮಣ ನಡೆಸಿದೆ.
ಇರಾನ್ ನಡೆಸಿದ ಈ ಪ್ರತಿ ದಾಳಿಯಲ್ಲಿ 20 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. 300 ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಇದರ ಜೊತೆಗೆ ಭಾರಿ ಪ್ರಮಾಣದ ಕಟ್ಟಡಗಳು ಧ್ವಂಸವಾಗಿವೆ ಹಾಗೂ ಅಪಾರವಾದ ಆಸ್ತಿ-ಪಾಸ್ತಿ ನಾಶವಾಗಿದೆ. ಹಲವಾರು ಮಂದಿ ಪತ್ತೆ ಹಚ್ಚಲು ಸಾಧ್ಯವಾಗದೆ ಕಾಣೆಯಾಗಿದ್ದಾರೆ ಎಂದು ವರದಿ ದೊರಕಿದೆ.
ಇದರ ಬೆನ್ನಲ್ಲೇ ಇಸ್ರೇಲ್ ದೇಶದ ಪ್ರಧಾನಿಯಾದ ಬೆಂಜಮಿನ್ ನೆತನ್ಯಾಹು ಇರಾನ್ ಗೆ ಎಚ್ಚರಿಕೆ ನೀಡಿದ್ದಾರೆ. ಇರಾನ್ ನಡೆಸಿದ ಪ್ರತಿದಾಳಿಗೆ ಉತ್ತರವಾಗಿ ಇಸ್ರೇಲ್ ಮುಂಬರುವ ದಿನಗಳಲ್ಲಿ ಮತ್ತಷ್ಟು ಘಾತಕವಾಗಿ ಪ್ರತಿದಾಳಿ ನಡೆಸಲಿದೆ ಎಂದು ಪ್ರಧಾನಮಂತ್ರಿ ನೆತನ್ಯಾಹು ಹೇಳಿದ್ದಾರೆ. ಇರಾನ್ ಕೂಡ ಈ ಎಚ್ಚರಿಕೆಗೆ ಪ್ರತ್ಯತ್ತರ ನೀಡಿದ್ದು, ಒಂದು ವೇಳೆ ಇಸ್ರೇಲ್ ಮತ್ತೆ ದಾಳಿ ಮಾಡಿದರೆ ನಾವು ಕೂಡ ತೀವ್ರವಾಗಿ ಪ್ರತಿದಾಳಿ ನಡೆಸುತ್ತೇವೆ ಎಂದು ಇರಾನ್ ಸರ್ಕಾರಿ ಮೂಲಗಳು ಹೇಳಿವೆ.
ಸಂಬಂಧಿತ ಕೊಂಡಿಗಳು: ಇತ್ತೀಚಿನ ಸುದ್ದಿಗಳು, ಅಂತರರಾಷ್ಟ್ರೀಯ
Hash Tags: #LatestNews #InternationalNews #WorldNews