ಮಹಾಭಾರತ ಭಾಗ 1: ಆದಿ ಪರ್ವ - ಪರೀಕ್ಷಿತ ಮಹಾರಾಜನಿಗೆ, ಜನಮೇಜಯ ಎಂಬ ಹೆಸರಿನ ಮಗನಿದ್ದ. ಜನಮೇಜಯ ಹಸ್ತಿನಾವತಿಯ ರಾಜ ಆಗಿರ್ತಾನೆ. ಅವನಿಗೆ ಶ್ರುತ ಸೇನ, ಉಗ್ರಸೇನ ಹಾಗೂ ಭೀಮಸೇನ ಎಂಬ ಮೂರು ಜನ ಸಹೋದರರು ಇದ್ದರು.
ಜನಮೇಜಯನಿಗೆ ಸರಮೆಯ ಶಾಪ
ಒಂದು ದಿನ ಮೂರೂ ಜನ ಒಂದು ಯಜ್ಞವನ್ನು ನಡೆಸುತ್ತಾ ಇರ್ತಾರೆ. ಅದೇ ಸಮಯಕ್ಕೆ ಸರಿಯಾಗಿ ದೇವಲೋಕದ ನಾಯಿಯಾದ ಸರಮೆಯ ಮರಿ, ಆ ಯಜ್ಞಮಂಟಪದ ಬಳಿಗೆ ಬರತ್ತೆ. ಆ ಮರಿಯನ್ನು ಜನಮೇಜಯನ ಸಹೋದರರು ಹೊಡೆದು ಓಡಿಸುತ್ತಾರೆ.
ಆಗ ಆ ನಾಯಿಯ ಮರಿ ತನ್ನ ತಾಯಿ ಸರಮೆಯ ಬಳಿ ಅಳುತ್ತ ಹೋಗಿ ನಡೆದ ಘಟನೆಯನ್ನ ಹೇಳುತ್ತೆ. ಆಗ ಸರಮೆ, ನೀನು ಏನಾದರು ಅವರಿಗೆ ತೊಂದರೆ ಕೊಟ್ಟೆಯಾ. ವಿನಾಕಾರಣ ಅವರು ನಿನಗ್ಯಾಕೆ ಹೊಡೆಯುತ್ತಾರೆ ಎಂದು ತನ್ನ ಮರಿಯನ್ನ ಕೇಳತ್ತೆ. ಆಗ ಮರಿ ಇದರಲ್ಲಿ ತನ್ನ ತಪ್ಪೇನೂ ಇಲ್ಲ ಅಮ್ಮಾ ಅಂತ ಹೇಳುತ್ತೆ.
ಅದನ್ನು ಕೇಳಿ ಸರಮೆಗೆ ಸಂಕಟ ಮತ್ತು ಕೋಪ ಎರಡೂ ಒಟ್ಟಿಗೆ ಬರತ್ತೆ. ಅದೇ ಕೋಪದಿಂದ ಸರಮೆ ತನ್ನ ಮರಿಯನ್ನ ಕರೆದುಕೊಂಡು ಜನಮೇಜಯನ ಯಜ್ಞಮಂಟಪದ ಬಳಿಗೆ ಬರತ್ತೆ.
ಮತ್ತು ಜನಮೇಜಯನನ್ನು ಕೇಳತ್ತೆ "ಮಹಾರಾಜರೇ, ನನ್ನ ಮರಿ ಕೇವಲ ಕುತೂಹಲದಿಂದ ಇಲ್ಲಿಗೆ ಬಂದಿತ್ತು. ಅದು ಯಾವುದೇ ತಪ್ಪನ್ನು ಮಾಡಿಲ್ಲ. ವಿನಾಕಾರಣ ಅದಕ್ಕೆ ಏಕೆ ಹೊಡೆದಿರಿ" ಅಂತ ಕೇಳತ್ತೆ
ಸರಮೆಯ ಪ್ರಶ್ನೆಗೆ ಜನಮೇಜಯ ಮತ್ತು ಅವನ ಸಹೋದರರು ಯಾವುದೇ ಉತ್ತರವನ್ನು ಸಹ ಕೊಡದೆ ಒಂದು ಥರದ ಉಢಾಫೆಯ ವರ್ತನೆಯನ್ನು ತೋರಿಸುತ್ತಾರೆ.
ಇದರಿಂದಾಗಿ ಕೋಪಗೊಂಡ ಸರಮೆ "ಯಾವುದೇ ತಪ್ಪು ಮಾಡದ ನನ್ನ ಮರಿಗೆ ಹಿಂಸೆ ನೀಡಿದ ನಿಮಗೆ ದೊಡ್ಡ ಆಪತ್ತು ಸಂಭವಿಸಲಿ" ಅಂತಾ ಜನಮೇಜಯ ಮತ್ತು ಅವನ ಸಹೋದರರಿಗೆ ಶಾಪ ಕೊಡತ್ತೆ.
ಈ ಘಟನೆಯಿಂದ ಜನಮೇಜಯನಿಗೆ ತುಂಬಾನೇ ಬೇಸರವಾಗತ್ತೆ. ಅವನು ಯಾಗವನ್ನು ಮುಗಿಸಿ ಹಸ್ತಿನಾವತಿಗೆ ವಾಪಸು ಹೋಗ್ತಾನೆ.
ಶ್ರುತಶ್ರವ ಮಹರ್ಷಿಗೆ ಭೇಟಿಯಾದ ಜನಮೇಜಯ ಮಹಾರಾಜ
ಒಂದು ದಿನ ಜನಮೇಜಯ ಮಹಾರಾಜ ಬೇಟೆ ಆಡೋದಕ್ಕೆ ಕಾಡಿಗೆ ಹೋಗಿರ್ತಾನೆ. ಆಗ ಶ್ರುತಶ್ರವ ಎಂಬ ಹೆಸರಿನ ಮಹರ್ಷಿ ಒಬ್ಬರು ತನ್ನ ಮಹಾ ತಪಸ್ವಿಯಾದಂತಹ ಮಗ ಸೋಮಶ್ರವನ ಜೊತೆಗೆ ಆಶ್ರಮದಲ್ಲಿ ವಾಸ ಮಾಡ್ತಾ ಇರೋದು ತಿಳಿಯುತ್ತೆ.
ಜನಮೇಜಯ ಮಹಾರಾಜ ಶ್ರುತಶ್ರವ ಮಹರ್ಷಿಗೆ ತನಗೆ ಸರಮೆ ನೀಡಿರುವ ಶಾಪದ ಬಗ್ಗೆ ಹೇಳ್ತಾನೆ. ಜೊತೆಗೆ ಶಾಪದಿಂದ ಬರುವ ಆಪತ್ತಿನಿಂದ ತನ್ನನ್ನು ಪಾರು ಮಾಡೋದಕ್ಕೆ ಮಹರ್ಷಿಯ ಪುತ್ರ ಸೋಮಶ್ರವನನ್ನು ತನ್ನ ಜೊತೆಗೆ ಹಸ್ತಿನಾವತಿಗೆ ಕಳಿಸೋದಕ್ಕೆ ಬೇಡಿಕೊಳ್ತಾನೆ.
ಆಗ ಶ್ರುತಶ್ರವ ಮಹರ್ಷಿ ಜನಮೇಜಯನಿಗೆ ಹೇಳ್ತಾರೆ "ಮಹಾರಾಜಾ, ಸೋಮಶ್ರವ ನನ್ನ ಅಂಶದಿಂದ ಹೆಣ್ಣು ಸರ್ಪದ ಹೊಟ್ಟೆಯಲ್ಲಿ ಹುಟ್ಟಿದವನು ಮತ್ತು ಮಹಾ ತಪಸ್ವಿ, ಮಹಾ ಜ್ಞಾನಿ. ಈತ ನಿನ್ನ ಎಲ್ಲಾ ಕಷ್ಟಗಳನ್ನೂ ನಿವಾರಿಸುವ ಸಾಮರ್ಥ್ಯ ಹೊಂದಿದ್ದಾನೆ. ಆದರೆ ಶಂಕರನಿಗೆ ಸಂಬಂಧಿಸಿದ ಕಷ್ಟಗಳನ್ನು ಮಾತ್ರ ನಿವಾರಿಸಲಾರ. ಮತ್ತು ಯಾವುದೇ ಬ್ರಾಹ್ಮಣ ಬಂದು ಏನೇ ಕೇಳಿದರೂ ಸಹ ಹಿಂದೆ ಮುಂದೆ ಯೋಚನೆ ಮಾಡದೇ ಕೊಟ್ಟುಬಿಡುತ್ತಾನೆ. ಅದನ್ನು ಮಾತ್ರ ನೀನು ತಡೆಯಬಾರದು. ಈ ಎಲ್ಲ ನಿಬಂಧನೆಗಳಿಗೆ ಒಪ್ಪಿದರೆ ನೀನು ಇವನನ್ನು ಕರೆದುಕೊಂಡು ಹೋಗಬಹುದು" ಅಂತ ಹೇಳ್ತಾರೆ.
ಜನಮೇಜಯ ರಾಜ ಮಹರ್ಷಿಯ ಪ್ರತಿಯೊಂದು ನಿಬಂಧನೆಗಳಿಗೂ ಒಪ್ಪಿಗೆ ನೀಡಿ ಸೋಮಶ್ರವನನ್ನು ಹಸ್ತಿನಾಪುರಕ್ಕೆ ಕರೆದುಕೊಂಡು ಹೋಗುತ್ತಾನೆ.
ದೌಮ್ಯ ಋಷಿ ಮತ್ತು ಅವರ ಮೂವರು ಶಿಷ್ಯರು
ಜನಮೇಜಯನ ರಾಜ್ಯದಲ್ಲಿ ದೌಮ್ಯ ಎಂಬ ಮಹರ್ಷಿ ಇರ್ತಾನೆ. ಅವನಿಗೆ ಆರುಣಿ, ಉಪಮನ್ಯು ಮತ್ತು ವೇದ ಅಂತ ಮೂರು ಜನ ಶಿಷ್ಯಂದಿರು ಇರ್ತಾರೆ. ಒಂದು ದಿನ ದೌಮ್ಯ ಮಹರ್ಷಿಗಳು ತಮ್ಮ ಶಿಷ್ಯ ಆರುಣಿಗೆ ಒಡೆದು ಹೋಗಿರುವಂತಹ ಗದ್ದೆಯ ಕಟ್ಟೆಯನ್ನ ಸರಿ ಮಾಡಿ ಬರುವಂತೆ ಹೇಳ್ತಾರೆ.
ಆರುಣಿ ಗದ್ದೆ ಹತ್ರ ಹೋಗಿ ನೋಡ್ತಾನೆ. ಆಗ ಕಟ್ಟೆ ಒಡೆದು ನೀರು ಹೋಗ್ತಾ ಇರತ್ತೆ. ಅದನ್ನ ಸರಿ ಮಾಡೋದಕ್ಕೆ ಎಷ್ಟೇ ಪ್ರಯತ್ನ ಮಾಡಿದ್ರು ಅವನ ಹತ್ರ ಸಾಧ್ಯ ಆಗೋದಿಲ್ಲ. ಏನು ಮಾಡೋದು ಅಂತ ಗೊತ್ತಾಗದೆ ತಾನೇ ಒಡೆದು ಹೋದಂತಹ ಕಟ್ಟೆಗೆ ಅಡ್ಡವಾಗಿ ಮಲಗಿ ನೀರನ್ನ ನಿಲ್ಲಿಸ್ತಾನೆ.
ಆರುಣಿ ಎಷ್ಟು ಹೊತ್ತಾದರೂ ಸಹ ಬರದೇ ಇರುವುದಕ್ಕೆ ದೌಮ್ಯ ಮಹರ್ಷಿಗಳು ಚಿಂತಿತರಾಗಿ ತಾವೇ ಶಿಷ್ಯನನ್ನು ಹುಡುಕುತ್ತಾ ಗದ್ದೆಯ ಹತ್ತಿರ ಬರ್ತಾರೆ. ಆಗ ಆರುಣಿ ಒಡೆದು ಹೋದ ಗದ್ದೆಯ ಕಟ್ಟೆಯಿಂದ ನೀರು ಹೋಗೋದನ್ನ ತಡೆಯೋದಕ್ಕೆ ತಾನೇ ಸ್ವತಃ ಮಲಗಿರೋದನ್ನ ನೋಡಿ ತುಂಬಾ ಸಂತೋಷ ಪಡ್ತಾರೆ.
ಅದೇ ಸಂತೋಷದಲ್ಲಿ ಆರುಣಿಗೆ ಹೇಳ್ತಾರೆ "ನೀನು ಗದ್ದೆಯ ಬದುವನ್ನು ತಡೆದು ನಿಲ್ಲಿಸಿದ್ದರಿಂದ ಉದ್ದಾಲಕ ಎಂದು ಪ್ರಖ್ಯಾತನಾಗುವೆ ಮತ್ತು ಸಕಲ ವೇದಗಳು, ಧರ್ಮಶಾಸ್ತ್ರಗಳು ನಿನಗೆ ಗೋಚರವಾಗಲಿ" ಅಂತ ಆಶೀರ್ವಾದ ಮಾಡಿ ಹೋಗ್ತಾರೆ.
ದೌಮ್ಯ ಮಹರ್ಷಿಗಳು ತಮ್ಮ ಇನ್ನೊಬ್ಬ ಶಿಷ್ಯನಾದ ಉಪಮನ್ಯುವನ್ನು ದನ ಕಾಯುವ ಕೆಲಸಕ್ಕೆ ನೇಮಿಸುತ್ತಾರೆ. ಅವನು ಹಗಲಿನಲ್ಲಿ ದನ ಕಾಯುತ್ತ ದೃಢಕಾಯನಾಗಿ ಇರುತ್ತಾನೆ.
ಒಂದು ದಿನ ದೌಮ್ಯ ಮಹರ್ಷಿಗಳು ಉಪಮನ್ಯುವಿನ ಹತ್ತಿರ ನೀನು ಆಹಾರಕ್ಕೆ ಏನು ಮಾಡುತ್ತಿರುವೆ ಅಂತಾ ಕೇಳ್ತಾರೆ.
ಆಗ ಉಪಮನ್ಯು ಹಗಲಿನಲ್ಲಿ ದನ ಕಾಯುತ್ತೇನೆ ಮತ್ತು ಸಂಜೆ ಮರಳಿ ಬಂದ ನಂತರ ಭಿಕ್ಷೆ ಬೇಡಿ ಊಟ ಮಾಡುತ್ತೇನೆ ಎಂದು ಹೇಳ್ತಾನೆ.
ಭಿಕ್ಷೆ ಬೇಡಿ ತಂದಿದ್ದು ಗುರುಗಳಿಗೆ ಅರ್ಪಿಸುವುದು ಶಿಷ್ಯನ ಧರ್ಮ ಅಂತ ಮಹರ್ಷಿಗಳು ಉಪಮನ್ಯುವಿಗೆ ಹೇಳ್ತಾರೆ.
ಮಾರನೇ ದಿನ ಸಂಜೆ ಉಪಮನ್ಯು ಭಿಕ್ಷೆ ಬೇಡಿ ತಂದು ದೌಮ್ಯ ಮಹರ್ಷಿಗಳಿಗೆ ಕೊಡ್ತಾನೆ. ಮಹರ್ಷಿಗಳು ಶಿಷ್ಯನಿಗೆ ಒಂದು ತುತ್ತನ್ನೂ ಸಹ ಉಳಿಸದೆ ಎಲ್ಲವನ್ನು ತಿಂದು ಮುಗಿಸುತ್ತಾರೆ. ಕೆಲವು ದಿನ ಇದೆ ಥರಾ ನಡೆಯುತ್ತೆ.
ಆಹಾರ ಇಲ್ಲದೇ ಇದ್ದರೂ ಸಹ ಉಪಮನ್ಯು ಸೊರಗದೇ ದೃಢಕಾಯನಾಗೇ ಇರ್ತಾನೆ. ಇದನ್ನು ನೋಡಿ ಮಹರ್ಷಿಗಳು ಉಪಮನ್ಯುವಿಗೆ ಕೇಳ್ತಾರೆ "ಉಪಮನ್ಯು, ನೀನು ಭಿಕ್ಷೆ ಬೇಡಿ ತಂದ ಎಲ್ಲ ಊಟವನ್ನೂ ಸಹ ನನಗೆ ಅರ್ಪಿಸುತ್ತಿದ್ದರೂ, ನೀನು ಮಾತ್ರ ಮೊದಲಿನಂತೇ ಲವಲವಿಕೆಯಲ್ಲೇ ಇರುತ್ತೀಯಲ್ಲ? ಇದು ಹೇಗೆ ಸಾಧ್ಯ?"
ಆಗ ಉಪಮನ್ಯು ಹೇಳ್ತಾನೆ "ಗುರುಗಳೇ, ನಾನು ಮೊದಲನೇ ಸಲ ತಂದ ಭಿಕ್ಷೆಯನ್ನು ನಿಮಗೆ ನೀಡಿ ಎರಡನೇ ಸಲ ಭಿಕ್ಷೆ ಬೇಡಿ ನಾನು ಊಟ ಮಾಡುತ್ತೇನೆ"
ಆಗ ಮಹರ್ಷಿಗಳು ಹೇಳ್ತಾರೆ "ನೀನು ಎರಡನೇ ಸಲ ಭಿಕ್ಷೆ ಬೇಡಿದರೆ ಅದು ಬೇರೆ ವಿದ್ಯಾರ್ಥಿಯ ಆಹಾರವನ್ನು ಕದ್ದು ಕೊಂಡಂತೆ ಆಗುತ್ತದೆ. ಅದು ತಪ್ಪು"
ಗುರುಗಳ ಮಾತಿಗೆ ಉಪಮನ್ಯು ತಲೆದೂಗಿ ಒಪ್ಪಿಕೊಳ್ಳುತ್ತಾನೆ. ಮತ್ತಷ್ಟು ದಿನಗಳು ಕಳೆಯುತ್ತವೆ. ಆಗಲೂ ಸಹ ಉಪಮನ್ಯು ದೃಢಕಾಯನಾಗೇ ಇರುತ್ತಾನೆ. ಇದನ್ನು ನೋಡಿ ಮಹರ್ಷಿಗಳು ಇದು ಹೇಗೆ ಸಾಧ್ಯ ಎಂದು ಮತ್ತೆ ಕೇಳುತ್ತಾರೆ.
ಆಗ ಉಪಮನ್ಯು ಮಹರ್ಷಿಗಳಿಗೆ ಹೇಳ್ತಾನೆ "ಗುರುಗಳೇ ನಾನು ದನ ಕಾಯಲು ಹೋದಾಗ ಹಸುವಿನ ಹಾಲನ್ನು ಕುಡಿದು ಆರೋಗ್ಯವಾಗಿದ್ದೇನೆ"
ದೌಮ್ಯ ಮಹರ್ಷಿಗಳು ಹೇಳ್ತಾರೆ "ಅದು ತಪ್ಪು ಕರುಗಳ ಪಾಲಿನ ಹಾಲನ್ನು ನೀನು ಕದ್ದು ಕುಡಿದಂತೆ ಆಗುತ್ತದೆ"
ಮತ್ತೆ ಕೆಲವು ದಿನಗಳು ಕಳೆದರೂ ಸಹ ಉಪಮನ್ಯು ಮೊದಲಿನಂತೇ ಆರೋಗ್ಯವಾಗಿ ಇರ್ತಾನೆ. ಗುರುಗಳು ಮತ್ತೆ ಕೇಳ್ತಾರೆ.
ಉಪಮನ್ಯು ಹೇಳ್ತಾನೆ "ಗುರುಗಳೇ, ಕರುಗಳು ಹಾಲು ಕುಡಿಯುವಾಗ, ಬರುವ ನೊರೆಯನ್ನು ತಿಂದು ಬದುಕಿದ್ದೇನೆ"
ಗುರುಗಳು ಹೇಳ್ತಾರೆ "ಇದು ಮಹಾ ಪಾಪ, ಕರುಗಳು ತಾವು ಕುಡಿದ ಹಾಲನ್ನು ನೊರೆಯ ರೂಪದಲ್ಲಿ ನಿನಗೇ ಕೊಡುತ್ತವೆ. ಇದು ಮಹಾ ಅಪರಾಧ. ಹಾಗೆ ಮಾಡಬೇಡ"
ಉಪಮನ್ಯುವಿಗೆ ಈಗ ಹೊಟ್ಟೆ ತುಂಬಿಸಿಕೊಳ್ಳಲು ಬೇರೆ ಯಾವುದೇ ದಾರಿ ಕಾಣಿಸದೇ ಎಕ್ಕೆಯ ಮರದ ಎಲೆಗಳನ್ನೇ ತಿಂದು ಬಿಡುತ್ತಾನೆ. ಅದರಿಂದ ಅವನ ಕಣ್ಣುಗಳು ಕುರುಡಾಗಿ ಅರಣ್ಯದಿಂದ ಬರುತ್ತಾ ದಾರಿಯಲ್ಲಿ ಒಂದು ಬಾವಿಯ ಒಳಗೆ ಬಿದ್ದು ಬಿಡುತ್ತಾನೆ.
ದೌಮ್ಯ ಮಹರ್ಷಿಗಳು ಉಪಮನ್ಯು ಎಷ್ಟು ಹೊತ್ತಾದರೂ ಬರದೇ ಇರುವುದನ್ನು ನೋಡಿ ಚಿಂತಾಕ್ರಾಂತರಾಗಿ ಹುಡುಕುತ್ತಾ ಅರಣ್ಯಕ್ಕೆ ಬಂದು ಜೋರಾಗಿ ಕೂಗುತ್ತಾರೆ "ಮಗೂ, ಉಪಮನ್ಯು ಎಲ್ಲಿರುವೆ?"
ಉಪಮನ್ಯು ಬಾವಿಯ ಒಳಗಿನಿಂದಲೇ ಹೇಳ್ತಾನೆ "ಗುರುಗಳೇ, ನಾನು ಬಾವಿಯ ಒಳಗಡೆ ಇದ್ದೇನೆ"
ಮಹರ್ಷಿಗಳು ಕೇಳ್ತಾರೆ "ಬಾವಿಯೊಳಗೆ ಏನು ಮಾಡುತ್ತಿರುವೆ?"
ಉಪಮನ್ಯು ಹೇಳ್ತಾನೆ "ಗುರುಗಳೇ, ಎಕ್ಕೆಯ ಮರದ ಎಲೆಗಳನ್ನೇ ತಿಂದು ಬಿಟ್ಟೆ. ಅದರಿಂದ ನನ್ನ ದೃಷ್ಟಿಯನ್ನು ಕಳೆದುಕೊಂಡು ಕಾಣದೇ ಈ ಬಾವಿಯಲ್ಲಿ ಬಿದ್ದುಬಿಟ್ಟೆ"
ಬಾವಿಯ ಬಳಿಗೆ ಬಂದು ನೋಡಿದ ಮಹರ್ಷಿಗಳಿಗೆ ತಮ್ಮ ಶಿಷ್ಯನ ಪರಿಸ್ಥಿತಿಯನ್ನು ನೋಡಿ ಕರುಣೆ ಮೂಡಿ ಹೇಳ್ತಾರೆ "ಮಗೂ, ನೀನು ಅಶ್ವಿನಿ ದೇವತೆಗಳನ್ನು ಪ್ರಾರ್ಥಿಸಿ ದೃಷ್ಟಿ ಕೊಡುವಂತೆ ಬೇಡಿಕೋ"
ಅದರಂತೆ ಉಪಮನ್ಯು ಅಶ್ವಿನಿ ದೇವತೆಗಳನ್ನು ಪ್ರಾರ್ಥಿಸಿ ತನಗೆ ಮರಳಿ ದೃಷ್ಟಿ ಕೊಡುವಂತೆ ಬೇಡಿಕೊಳ್ಳುತ್ತಾನೆ.
ಅವನ ಭಕ್ತಿಗೆ ಪ್ರಸನ್ನರಾಗಿ ಅಶ್ವಿನಿ ದೇವತೆಗಳು ಪ್ರತ್ಯಕ್ಷರಾಗುತ್ತಾರೆ ಮತ್ತು ಒಂದು ಭಕ್ಷ್ಯವನ್ನು ನೀಡಿ ಅದನ್ನು ಸೇವಿಸಿದರೆ ದೃಷ್ಟಿ ಬರುತ್ತದೆ ಎಂದು ಹೇಳುತ್ತಾರೆ.
ಆಗ ಉಪಮನ್ಯು ಹೇಳ್ತಾನೆ "ದೇವತೆಗಳೇ, ನಾನು ನನ್ನ ಗುರುಗಳಿಗೆ ಅರ್ಪಿಸದೇ ನೀವು ಕೊಟ್ಟ ಭಕ್ಷ್ಯವನ್ನು ಸೇವಿಸಲಾರೆ"
ಆಗ ಅಶ್ವಿನಿ ದೇವತೆಗಳು ಹೇಳ್ತಾರೆ "ಹಿಂದೆ ನಿನ್ನ ಗುರುಗಳು ನಾವು ಕೊಟ್ಟ ಭಕ್ಷ್ಯವನ್ನು ತಮ್ಮ ಗುರುಗಳಿಗೆ ಸಮರ್ಪಿಸದೆ ತಿಂದರು. ನೀನು ಸಹ ಅದೇ ರೀತಿ ತಿನ್ನಬಹುದು"
ಆದರೆ ಉಪಮನ್ಯು ಮಾತ್ರ ಅಶ್ವಿನಿ ದೇವತೆಗಳ ಮಾತಿನಿಂದ ಯಾವುದೇ ಥರದಲ್ಲೂ ಪ್ರಭಾವಿತನಾಗದೇ ಭಕ್ಷ್ಯವನ್ನು ತನ್ನ ಗುರುಗಳಿಗೆ ಸಮರ್ಪಿಸದೆ ತಿನ್ನಲು ಒಪ್ಪಲಿಲ್ಲ.
ಅವನ ಗುರು ಭಕ್ತಿಗೆ ಮೆಚ್ಚಿ ಅಶ್ವಿನಿ ದೇವತೆಗಳು ಅವನಿಗೆ ದೃಷ್ಟಿಯನ್ನು ನೀಡಿ ಆಶೀರ್ವದಿಸಿ ಮಾಯವಾಗುತ್ತಾರೆ.
ಉಪಮನ್ಯು ಬಾವಿಯಿಂದ ಮೇಲೆ ಬಂದು ಮಹರ್ಷಿಗಳಿಗೆ ಭಕ್ತಿಯಿಂದ ನಮಸ್ಕರಿಸುತ್ತಾನೆ. ದೌಮ್ಯ ಮಹರ್ಷಿಗಳು ಸಕಲ ವೇದಗಳು, ಧರ್ಮಶಾಸ್ತ್ರಗಳು ಅವನಿಗೆ ಒಲಿಯುವಂತೆ ಆಶೀರ್ವದಿಸುತ್ತಾರೆ.
ಸಂಬಂಧಿತ ಲಿಂಕ್ಗಳು: ಇತ್ತೀಚಿನ ಸುದ್ದಿ, ಆಧ್ಯಾತ್ಮಿಕತೆ, ಫಿಟ್ನೆಸ್, ಜೀವನಶೈಲಿ, ಆರೋಗ್ಯ